ಗೋಳಗುಮ್ಮಟಕ್ಕೆ ಹೆಸರುವಾಸಿಯಾದ ಶರಣರ ನಾಡು ಬಿಜಾಪುರದಲ್ಲಿ ಗೋಳಗುಮ್ಮಟದ ಎತ್ತರವನ್ನೂ ಮೀರಿಸಿ ವಚನ ಸಾಹಿತ್ಯವನ್ನು ಬೆಳೆಸಿ ಕರ್ನಾಟಕದ ವಚನ ಗುಮ್ಮಟವೆಂದೇ ಹೆಸರಾದವರು ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿಯವರೆಂದು ಪತ್ರಕರ್ತರೂ ಆದ ಖ್ಯಾತ ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.
ನಗರದ ಪ್ರತಿಷ್ಠಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವಾ ಸಂಸ್ಥೆಗಳಲ್ಲೊಂದಾದ ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನವು ಖ್ಯಾತ ವಚನ ಸಾಹಿತ್ಯ ಸಂಶೋಧಕ ಡಾ.ಫ.ಗು. ಹಳಕಟ್ಟಿ ಅವರ ಜಯಂತಿಯ ಅಂಗವಾಗಿ ಇಂದು ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯಕ್ಕಾಗಿ ತಮ್ಮ ಜೀವ - ಜೀವನವನ್ನೆಲ್ಲಾ ತ್ಯಾಗ ಮಾಡಿದ ವಚನ ಸಾಹಿತ್ಯ ಮಹಾತ್ಮ ಫ.ಗು.ಹಳಕಟ್ಟಿಯ ವರ ಜನ್ಮ ದಿನವನ್ನು 2023 ನೇ ವರ್ಷದಿಂದ ವಚನ ಸಾಹಿತ್ಯ ಸಂರಕ್ಷಣಾ ದಿನವಾಗಿ ಆಚರಿಸಲು ನಮ್ಮ ಸರ್ಕಾರ ಘೋಷಿಸಿರುವುದು ಅತ್ಯಂತ ಅರ್ಥಪೂರ್ಣವಾದ ಕೈಂಕರ್ಯವೆಂದರು.
ನಾಡಿನ ಪ್ರಖ್ಯಾತ ಬಸವ ತತ್ವ ಪ್ರಚಾರಕರಾದ ಡಾ.ಮಾತೆ ಬಸವಾಂಜಲಿದೇವಿ ಅವರು ಮಾತನಾಡಿ, ಶರಣ ಸಂಸ್ಕೃತಿ ಚಿಂತಕ, ವಚನಗಳ ಸಂಶೋಧಕ, ಸುಪ್ರಸಿದ್ಧ ಕವಿ ಹಾಗೂ ಮಾನವೀಯತೆಯ ಮೇರು ವ್ಯಕ್ತಿತ್ವದ ವಿಭೂತಿ ಪುರುಷ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರದು ಬಹು ದೊಡ್ಡ ಶರಣ ವ್ಯಕ್ತಿತ್ವ. ಹಾಗಾಗಿ ಸಂಪೂರ್ಣವಾಗಿ ಅವರು ವಚನ ಸಾಹಿತ್ಯದ ಸಂರಕ್ಷಣಾ ಕಾಯಕಕ್ಕೆ ತಮ್ಮನ್ನು ತೊಡಗಿಸಿಕೊಂಡು ಇದಕ್ಕಾಗಿ ತಮ್ಮ ಇಡೀ ಜೀವಮಾನವನ್ನು ಮೀಸಲಿಟ್ಟು ನಾಡಿಗೆ ವಚನಗಳ ಬಹುದೊಡ್ಡ ಸಿರಿ ಸಂಪತ್ತನ್ನು ಕೊಟ್ಟವರು ಎಂದು ಹೇಳಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಲಯ ಉಪಾಧ್ಯಕ್ಷ ಡಾ.ಬಿ.ಆರ್. ನಟರಾಜ್ ಜೋಯಿಸ್ ರವರು ಕಾರ್ಯಕ್ರಮ ಕುರಿತು ಮಾತನಾಡಿದರು. ಶರಣ ಚನ್ನಬಸಪ್ಪ ಅವರು ವಚನ ಗಾಯನ ನಡೆಸಿಕೊಟ್ಟರು.
ಇದೇ ವೇಳೆ ಶ್ರೀ ಹೊಸಮಠದ ಪೀಠಾಧ್ಯಕ್ಷರಾದ ಶ್ರೀಚಿದಾನಂದ ಮಹಾಸ್ವಾಮೀಜಿಗಳಿಗೆ ಹಾಗೂ ಬಸವತತ್ವ ಪ್ರವಚನಕಾರ್ತಿ ಡಾ.ಮಾತೆ ಬಸವಾಂಜಲಿದೇವಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಅವರು ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು. ಭಾಗವಹಿಸಿದ್ದವರೆಲ್ಲರೂ ವಚನ ಪಿತಾಮಹ ಫ. ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಮೈಸೂರು ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಸುರೇಶ್ ಗೋಲ್ಡ್, ಸಮಾಜ ಸೇವಕ ಹಾಗು ಗಾಯಕ ಚನ್ನಬಸಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
![](https://i.ytimg.com/vi/4AiOctC03zY/mqdefault.jpg)