ನಿಮ್ಮ ಘನತೆ ಕಾಪಾಡಲು ಪ್ರಯತ್ನಿಸಿದ್ದೇನೆ: ಖರ್ಗೆಗೆ ಸಭಾಪತಿ ಧನಕರ್ ಮನಮುಟ್ಟುವ ಮಾತು@VijayKarnataka
ನಾನೊಬ್ಬ ಸಿಂಪಲ್ ಮನುಷ್ಯ, ಅದೆಷ್ಟೋ ಬಾರಿ ನಿಮ್ಮ ಘನತೆ ಕಾಪಾಡುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಸ್ಥಾನಕ್ಕೆ ಗೌರವವನ್ನು ಕೊಡಿ, ಪ್ರತೀ ಬಾರಿ ನಾನು ಇದನ್ನು ಹೇಳಲು ಸಾಧ್ಯವಿಲ್ಲ ಎಂದು ರಾಜ್ಯಸಭೆಯ ಸಭಾಪತಿ ಜಗದೀಪ್ ದಿನಕರ್, ಖರ್ಗೆಗೆ ಮನವಿ ಮಾಡಿದ್ದಾರೆ.
ಹೊಸದಿಲ್ಲಿ : ನನ್ನನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದವರು ಇಲ್ಲಿ ಕೂತಿದ್ದಾರೆ (ಸೋನಿಯಾ ಗಾಂಧಿ). ನಾನು ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದು ಜೈರಾಂ ರಮೇಶ್ ಅವರಿಂದಾಗಲಿ, ನಿಮ್ಮಿಂದಾಗಲಿ ಅಲ್ಲ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇಂದಿನ ( ಜುಲೈ 2) ಸದನ ಕಲಾಪದಲ್ಲಿ ಖರ್ಗೆಯವರು ತಮ್ಮ ಸರದಿ ಇಲ್ಲದಿದ್ದಾಗಲೂ ಎದ್ದು ಮಾತನಾಡುತ್ತಿದ್ದಕ್ಕೆ ರಾಜ್ಯಸಭೆಯ ಸಭಾಪತಿ ಮತ್ತು ಉಪ ರಾಷ್ಟ್ರಪತಿಯೂ ಆಗಿರುವ ಜಗದೀಪ್ ದಿನಕರ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದರು. ಜೊತೆಗೆ, ಸದನ ಕಲಾಪದ ವಿದಿವಿಧಾನದ ಬಗ್ಗೆ ಒಂದೆರಡು ನಿಮಿಷ ಪಾಠ ಮಾಡಿದರು.
" ಖರ್ಗೆಜೀ, ನಿಮ್ಮ ಮೇಲೆ ಕಠಿಣವಾದ ಕ್ರಮ ತೆಗೆದುಕೊಳ್ಳುವಂತೆ ನನ್ನನ್ನು ಪ್ರಚೋದಿಸಬೇಡಿ, ನನ್ನ ಮಾತನ್ನು ತಾಳ್ಮೆಯಿಂದ ಕೇಳಿ. ನಿಮಗೆ ಮನಸ್ಸಾದಾಗಲೆಲ್ಲಾ ಎದ್ದು ನಿಂತು ಮಾತನಾಡುವಂತಿಲ್ಲ. ಸದನಕ್ಕೆ ತನ್ನದೇ ಆದ, ಪ್ರಕ್ರಿಯೆಗಳಿವೆ, ಆ ಪದ್ದತಿಯನ್ನು ಉಲ್ಲಂಘಿಸಬೇಡಿ " ಎಂದು ಧನಕರ್ ಅವರು ಖರ್ಗೆಗೆ ಮನವಿ ಮಾಡಿದ್ದಾರೆ.
ಮುಂದುವರಿಯುತ್ತಾ, ನೀವು ಮೊದಲು ಸಭಾಪತಿ ಸ್ಥಾನಕ್ಕೆ ಗೌರವವನ್ನು ಕೊಡಬೇಕು. ನೀವು ಇದ್ದಕ್ಕಿದ್ದಂತೆ ಎದ್ದು ನನ್ನ ಮಾತನ್ನು ಅರ್ಥ ಮಾಡಿಕೊಳ್ಳದೇ ಮಾತನಾಡಲು ಆರಂಭಿಸುತ್ತೀರಿ. ರಾಜ್ಯಸಭಾ ಸಭಾಪತಿ ಹುದ್ದೆಗೆ ಈ ರೀತಿಯ ಅಗೌರವ ಇತಿಹಾಸದಲ್ಲೇ ಆಗಲಿಲ್ಲ ಎಂದು ಧನಕರ್, ಖರ್ಗೆಗೆ ಎಚ್ಚರಿಸಿದ್ದಾರೆ.
![](https://i.ytimg.com/vi/E6lBmfgLVgo/maxresdefault.jpg)